ಶ್ರೀ ಮಹಾವೀರ ಸ್ವಾಮಿಯ ಶೆಟ್ರ ಬಸದಿ, ಮೂಡುಬಿದಿರೆ ಈ ಬಸದಿ ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ಬಸದಿಗಳಲ್ಲೊಂದು. == ಸ್ಥಳ == ಈ ಬಸದಿಯು ಮಂಗಳೂರು ತಾಲೂಕು, ಮೂಡುಬಿದಿರೆಯಲ್ಲಿದೆ. ಬಸದಿಯು ತಾಲೂಕು ಕೇಂದ್ರದಿಂದ ಸುಮಾರು ೧೮ ಕಿ.ಮೀ ಅಂತರದಲ್ಲಿದೆ. ಇದು ಹಿರೇ ಅಮ್ಮನವರ ಬಸದಿಯಿಂದ ೧೦೦ ಮೀ ದೂರದಲ್ಲಿದೆ. ಈ ಬಸದಿಯು ಮೂಡುಬಿದಿರೆಯ ಜೈನ ಮಠಕ್ಕೆ ಸೇರಿದ್ದು ಇಲ್ಲಿಗೆ ಜೈನ್ ಸ್ಕೂಲ್ ಹಾಗೂ ಶಿಲಾಮಯ ಕಲ್ಲು ಬಸದಿಯ ದಾರಿಯಲ್ಲಿ ಹೋಗಬಹುದು. ಬಸದಿಯನ್ನು ಇಲ್ಲಿಯ ಜೈನ ಮಠದ ಸ್ವಾಮೀಜಿ ನಡೆಸುತ್ತಿದ್ದಾರೆ. ಈ ಬಸದಿಯನ್ನು ಬಂಗೊತ್ತಮ ಶೆಟ್ಟಿ ಎಂಬ ಶ್ರೀಮಂತ ರತ್ನ ವ್ಯಾಪಾರಿಯೊಬ್ಬರು ಕಟ್ಟಿಸಿದ್ದರು. ಇದು ಸುಮಾರು ೪೦೦ ವರ್ಷಗಳ ಹಿಂದಿನದು. == ಆವರಣ == ಕಪ್ಪುಶಿಲೆಯ ಮಹಾವೀರ ಸ್ವಾಮಿ ಇಲ್ಲಿನ ಮೂಲನಾಯಕ, ಇಲ್ಲಿ ಎಡಬದಿಗೆ ಹರಿಪೀಠದ ಪ್ರತಿಮೆಗಳೂ ಎಡ - ಬಲ - ಬಸದಿಯಲ್ಲಿ ಕರಿಯ ಶಿಲೆಯ ಸರಸ್ವತಿ ಹಾಗೂ ಪದ್ಮಾವತಿ ದೇವಿಯವರ ಬಿಂಬಗಳೂ ಕಂಗೊಳಿಸುತ್ತದೆ. ಇಲ್ಲಿ ಮೇಗಿನ ನೆಲೆಯು ಕಂಡು ಬರುವುದಿಲ್ಲ. ಬಸದಿಯ ಎಡ ಹಾಗೂ ಬಲ ಭಾಗದಲ್ಲಿರುವ ಜಾಗವನ್ನು ಜನರು ಕುಳಿತುಕೊಳ್ಳಲು ಖಾಲಿ ಇಡಲಾಗಿದೆ. ಇಲ್ಲಿ ಯಾವುದೇ ಕಾರ್ಯಾಲಯವಿಲ್ಲ. ಇಲ್ಲಿ ಮುನಿಗಳಿರಲಿಲ್ಲ. ಇಲ್ಲಿ ಮುನಿವಾಸವಿಲ್ಲ. ನಮಸ್ಕಾರ ಮಂಟಪಕ್ಕೆ ಹೋಗುವ ಜಗಲಿಯಲ್ಲಿ ದ್ವಾರಪಾಲಕರ ಚಿತ್ರವಿದೆ. ಗೋಡೆಯ ಮೇಲೆ ಯಾವುದೇ ರೀತಿಯ ಚಿತ್ರವಿಲ್ಲ, ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬವಿರುವ ಮಂಟಪವಿದೆ. ಅಲ್ಲಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪ ತೀರ್ಥಮಂಟಪವಾಗಿದೆ. ತೀರ್ಥಂಕರ ಮಂಟಪದಲ್ಲಿ ಗಂಧಕುಟಿಯಿದೆ. ಗಂಧಕುಟಿಯ ಬಳಿ ಶ್ರುತ, ಬ್ರಹ್ಮ ದೇವರು ಇತ್ಯಾದಿ ಮೂರ್ತಿಗಳು ಇವೆ. ಇವರಿಗೂ ಪೂಜೆ ನಡೆಯುತ್ತದೆ. == ಕಲಾಕೃತಿ, ಧಾರ್ಮಿಕ ಕಾರ್ಯಗಳು == ಇಲ್ಲಿಯ ಯಕ್ಷ ಯಕ್ಷಿಯರಾದ ಶ್ರೀ ಪದ್ಮಾವತಿ, ಸರಸ್ವತಿಯವರ ಮೂರ್ತಿಗಳಿದ್ದು ಇವರಿಗೂ ಪೂಜೆ ನಡೆಯುತ್ತದೆ. ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಇಲ್ಲಿರುವ ಜಿನಬಿಂಬದ ಪೀಠಗಳ ಮೇಲೆ ಬರವಣಿಗೆ ಇದೆ. ಆದರೆ ಅದನ್ನು ಓದಲು ಆಗುವುದಿಲ್ಲ. ಮೂಲನಾಯಕ ಶ್ರೀ ಮಹಾವೀರ ಸ್ವಾಮಿಯ ಮೂರ್ತಿ ಶಿಲೆಯದ್ದು, ಇದು ನಿಂತಭಂಗಿಯಲ್ಲಿದ್ದು ಮಕರ ತೋರಣದ ಪ್ರಭಾವಳಿ ಇದೆ. ದಿನಾಲು ಮೂಲ ಸ್ವಾಮಿಗೆ ಜಲಾಭಿಷೇಕ ಇತರ ಅಭಿಷೇಕಗಳನ್ನು ಮಾಡಲಾಗುತ್ತದೆ. ದಿನದಲ್ಲಿ ಮಧ್ಯಾಹ್ನದ ಹೊತ್ತಿಗೆ ಪೂಜೆ ನಡೆಸಲಾಗುತ್ತದೆ. ಬಸದಿಯ ಬಲ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಹಲವು ನಾಗರ ಕಲ್ಲುಗಳಿವೆ. ಅವುಗಳನ್ನು ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ನಾಗನಿಗೆ ಹಾಲಿನ ಅಭಿಷೇಕವಿದೆ. == ಸಧ್ಯದ ಸ್ಥಿತಿ == ಇಲ್ಲಿ ಯಾವುದೇ ಶಿಲಾಶಾಸನಗಳು ಕಂಡುಬರುವುದಿಲ್ಲ. ಬಸದಿಯ ಸುತ್ತಲೂ ಕಂಪೌಂಡ್ ಇದೆ. ಅದನ್ನು ಮುರಕಲ್ಲಿನಿಂದ ನಿರ್ಮಿಸಲಾಗಿದೆ. ಈ ಬಸದಿಗೆ ಕಾರ್ಯಾಲಯವೂ ಇಲ್ಲ. ಬಹಳ ವರ್ಷಗಳ ಹಿಂದಿನ ಬಸದಿಯಾಗಿರುವ ಕಾರಣ ಬಹಳಷ್ಟು ಶಿಥಿಲಗೊಂಡ ಸ್ಥಿತಿಯಲ್ಲಿದೆ. == ಉಲ್ಲೇಖಗಳು ==